TSK

TSK · ಯೆಶಾಯ 37:23

Treasury of Scripture Knowledge references in ಕನ್ನಡ IRV.

ಅಂಗೀಕಾರಕ್ಕೆ ಹಿಂತಿರುಗಿ

ಅದಕ್ಕೆ ಫರೋಹನು, “ಯೆಹೋವನೆಂಬುವವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲರನ್ನು ಹೋಗಗೊಡಿಸುವುದೇತಕ್ಕೆ? ಯೆಹೋವನು ಯಾರೋ ನನಗೆ ಗೊತ್ತಿಲ್ಲ. ಇದು ಮಾತ್ರವಲ್ಲದೆ, ಇಸ್ರಾಯೇಲರನ್ನು ಹೋಗಲು ನಾನು ಬಿಡುವುದೇ ಇಲ್ಲ” ಅಂದನು.

ಯೆಹೋವನೇ, ದೇವರುಗಳಲ್ಲಿ ನಿನಗೆ ಸಮಾನರು ಯಾರು? ನಿನ್ನ ಹಾಗೆ ಪರಿಶುದ್ಧತ್ವದಲ್ಲಿ ಸರ್ವೋತ್ತಮನು ಮಹಿಮೆ ಹೊಂದಿದವನು, ಭಯಂಕರನೂ, ಅದ್ಭುತ ಕೃತ್ಯಗಳನ್ನು ನಡಿಸುವವನೂ ಆಗಿರುವ ನಿನಗೆ ಸಮಾನರು ಯಾರಿದ್ದಾರೆ?

ನಿನ್ನ ಸೇವಕನಿಂದ ಕೊಲ್ಲಲ್ಪಟ್ಟ ಸಿಂಹಕ್ಕೂ, ಕರಡಿಗೂ ಆದ ಗತಿಯೇ ಜೀವಸ್ವರೂಪನಾದ ದೇವರ ಸೈನ್ಯವನ್ನು ನಿಂದಿಸುವಂಥ ಈ ಸುನ್ನತಿಯಿಲ್ಲದ ಫಿಲಿಷ್ಟಿಯನಿಗೂ ಆಗಬೇಕು.

ನೀನು ಯಾರನ್ನು ನಿಂದಿಸಿ ಯಾರನ್ನು ದೂಷಿಸಿದ್ದೀ? ಯಾರ ವಿರುದ್ಧವಾಗಿ ಬಾಯ್ದೆರೆದು ಹೀಯಾಳಿಸಿದ್ದಿ? ನೀನು ಸೊಕ್ಕಿನಿಂದ ನೋಡಿದ್ದು ಯಾರನ್ನು? ಇಸ್ರಾಯೇಲರ ಸದಮಲಸ್ವಾಮಿಯನ್ನಲ್ಲವೇ!

ನನಗೆ ಉಂಟಾಗಿರುವ ಅವಮಾನವು ಯಾವಾಗಲೂ ನನ್ನ ಮುಂದೆ ಇದೆ; ನಾಚಿಕೆಯು ನನ್ನ ಮುಖವನ್ನು ಮುಚ್ಚಿದೆ.

ದೇವರೇ, ವಿರೋಧಿಗಳು ಇನ್ನೆಲ್ಲಿಯ ತನಕ ನಿಂದಿಸುತ್ತಿರಬೇಕು? ವೈರಿಗಳು ನಿನ್ನ ನಾಮವನ್ನು ಸದಾಕಾಲವೂ ತಿರಸ್ಕರಿಸಬಹುದೋ?

ಮೇಲಣ ಲೋಕವನ್ನು ಎಡೆಬಿಡದೆ ಮುಟ್ಟುತ್ತಿರುವ, ನಿನ್ನ ವೈರಿಗಳ ಗದ್ದಲವನ್ನೂ ನಿನ್ನ ವಿರೋಧಿಗಳ ದೊಂಬಿಯನ್ನೂ ಮರೆಯದಿರು.

ಮನುಷ್ಯನ ಗರ್ವದೃಷ್ಟಿಯು ತಗ್ಗಿಹೋಗುವುದು, ಮನುಷ್ಯರ ಅಹಂಕಾರವು ತಗ್ಗುವುದು. ಯೆಹೋವನೊಬ್ಬನೇ ಆ ದಿನದಲ್ಲಿ ಉನ್ನತೋನ್ನತನಾಗಿರುವನು.

¶ ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೇ? ಗರಗಸವು ಕತ್ತರಿಸುವವನಿಗೆ ಪ್ರತಿಯಾಗಿ ತನ್ನನ್ನು ಹೆಚ್ಚಿಸಿಕೊಂಡೀತೇ? ಕೋಲು ತನ್ನನ್ನು ಎತ್ತಿದವನ ಮೇಲೆಯೇ ಬೀಸುವಂತಾಯಿತು, ಮರಕ್ಕಿಂತ ಶ್ರೇಷ್ಠನಾಗಿರುವ ಮನುಷ್ಯನನ್ನು ದೊಣ್ಣೆಯು ಎತ್ತಿಕೊಂಡ ಹಾಗಾಯಿತು.

ಚೀಯೋನಿನ ನಿವಾಸಿಗಳೇ, ಉತ್ಸಾಹ ಧ್ವನಿಮಾಡಿರಿ; ಜಯಘೋಷಮಾಡಿರಿ. ಇಸ್ರಾಯೇಲರ ಪರಿಶುದ್ಧನು ನಿಮ್ಮ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ” ಎಂಬುದೇ.

ಆ ದಿನದಲ್ಲಿ ಜನರು ತಮ್ಮ ಸೃಷ್ಟಿಕರ್ತನನ್ನೇ ದೃಷ್ಟಿಸುವರು ಮತ್ತು ಇಸ್ರಾಯೇಲಿನ ಸದಮಲಸ್ವಾಮಿಯ ಕಡೆಗೆ ಕಣ್ಣುಗಳನ್ನು ತಿರುಗಿಸುವರು.

ನಿನ್ನ ದೇವರಾದ ಯೆಹೋವನು ಅಶ್ಶೂರದ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ನಿಂದಾವಾಕ್ಯಗಳನ್ನು ಕೇಳಿರುವನು, ಅವನು ತನ್ನ ಯಜಮಾನನ ಹೆಸರಿನಲ್ಲಿ ಜೀವಸ್ವರೂಪನಾದ ದೇವರನ್ನು ದೂಷಿಸಿದ್ದರಿಂದ ಆತನು ಅವನಿಗೆ ಮುಯ್ಯಿತೀರಿಸಾನು. ಆದುದರಿಂದ ಉಳಿದಿರುವ ಸ್ವಲ್ಪ ಜನರಿಗೋಸ್ಕರ ಯೆಹೋವನನ್ನು ಪ್ರಾರ್ಥಿಸು’” ಎಂದು ಹೇಳಿದರು.

ಕ್ರಿಮಿಪ್ರಾಯದವನಾದ ಯಾಕೋಬೇ, ಇಸ್ರಾಯೇಲ್ ಜನವೇ, ಭಯಪಡಬೇಡ, ನಾನೇ ನಿನಗೆ ಸಹಾಯಕನು, ಇಸ್ರಾಯೇಲಿನ ಸದಮಲಸ್ವಾಮಿಯು ನಿನಗೆ ವಿಮೋಚಕನು” ಎಂದು ಯೆಹೋವನು ಹೇಳುತ್ತಾನೆ.

ಏಕೆಂದರೆ ಯೆಹೋವನೆಂಬ ನಾನು ನಿನ್ನ ದೇವರು, ಇಸ್ರಾಯೇಲರ ಸದಮಲಸ್ವಾಮಿಯಾದ ನಾನು ನಿನ್ನ ರಕ್ಷಕನು. ಐಗುಪ್ತವನ್ನು ನಿನ್ನ ವಿಮೋಚನೆಗೆ ಈಡುಮಾಡಿದ್ದೇನೆ. ನಿನ್ನ ಬದಲಾಗಿ ಕೂಷ್ ಮತ್ತು ಸೆಬಾ ಸೀಮೆಗಳನ್ನು ಕೊಟ್ಟಿದ್ದೇನೆ.

“ನರಪುತ್ರನೇ, ನೀನು ತೂರಿನ ಅರಸನಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀನು ಉಬ್ಬಿದ ಮನಸ್ಸುಳ್ಳವನಾಗಿ ಆಹಾ, ನಾನೇ ದೇವರು, ಸಮುದ್ರ ಮಧ್ಯದಲ್ಲಿ ದೇವರ ಸ್ಥಾನದಲ್ಲಿ ಕುಳಿತುಕೊಂಡಿರುವೆನು’ ಎಂದು ಹೇಳಿಕೊಂಡಿದ್ದೀ; ನೀನು ದೇವರಲ್ಲ, ಮನುಷ್ಯನೇ. ಆದರೂ ನಿನ್ನನ್ನು ನೀನೇ ದೇವರಿಗೆ ಸಮಾನನೆಂದು ಭಾವಿಸಿಕೊಂಡಿರುವಿ.

ನಿನ್ನವರು ಬಾಯಿ ತೆರೆದು, ನನ್ನ ವಿರುದ್ಧವಾಗಿ ಆಡಿದ ಮಾತುಗಳನ್ನು ಕೇಳಿದ್ದೇನೆ.”

¶ “ಹೀಗೆ ಅವನ ಹೃದಯವು ಉಬ್ಬಿ, ಅವನ ಸ್ವಭಾವವು ಕಠಿಣವಾಗಿ ಅವನಿಗೆ ಸೊಕ್ಕೇರಲು ಅವನನ್ನು ರಾಜಾಸನದಿಂದ ತಳ್ಳಿ, ಮಾನವನ್ನು ತೆಗೆದುಬಿಟ್ಟರು.

ಪರಾತ್ಪರನಾದ ದೇವರಿಗೆ ವಿರುದ್ಧವಾಗಿ ಕೊಚ್ಚಿಕೊಂಡು ಪರಾತ್ಪರನಾದ ದೇವರ ಭಕ್ತರನ್ನು ಬಾಧಿಸಿ ಕಟ್ಟಳೆಯ ಕಾಲಗಳನ್ನೂ, ಧರ್ಮವಿಧಿಗಳನ್ನೂ ಮಾರ್ಪಡಿಸಲು ಮನಸ್ಸು ಮಾಡುವನು; ಆ ಭಕ್ತರು ಒಂದುಕಾಲ, ಎರಡುಕಾಲ, ಅರ್ಧಕಾಲ ಅವನ ಕೈವಶವಾಗಿರುವರು.

ಯಾವುದು ದೇವರೆನಿಸಿಕೊಳ್ಳುತ್ತದೋ ಯಾವುದು ಆರಾಧಿಸಲ್ಪಡುತ್ತದೋ ಅದನ್ನೆಲ್ಲಾ ನಾಶನಕ್ಕೆ ಅಧೀನನಾದ ಆ ಪುರುಷನು ಎದುರಿಸಿ ಅದಕ್ಕಿಂತ ಮೇಲಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ತಾನು ದೇವರೆಂದು ಘೋಷಿಸಿಕೊಂಡು ದೇವರ ಗರ್ಭಗುಡಿಯಲ್ಲೇ ಕುಳಿತುಕೊಳ್ಳುತ್ತಾನೆ.